ಸದ್ಯ ಗಾಂಧಿನಗರದಲ್ಲಿ ತಮ್ಮ ಮೇಕಿಂಗ್, ಹಾಡುಗಳಿಂದಲೇ ದೊಡ್ಡದಾಗಿ ಸದ್ದು ಮಾಡುತ್ತಿರುವ ಚಿತ್ರ ಫೈಟರ್. ಸಾಹಸ ಪ್ರದಾನ ಚಿತ್ರವಾದರೂ ಮನರಂಜನೆಗೇನೂ ಕೊರತೆಯಿಲ್ಲ, ಜೊತೆಗೆ ಪ್ರತಿ ಹಾಡುಗಳೂ ಕಲರ್ ಫುಲ್ ಆಗಿ ಮೂಡಿಬಂದಿವೆ.
ಚಿತ್ರದ ಹೊಸ ವೀಡಿಯೋ ಹಾಡೊಂದು ಇದೀಗ ಬಿಡುಗಡೆಯಾಗಿದೆ. ಪಾಂಡಿಚೇರಿ ಬೀಚ್ ನಲ್ಲಿ ಚಿತ್ರೀಕರಿಸಲಾದ ಈ ಹಾಡಿಗೆ ಗಾಯಕಿ ಕೆ.ಎಸ್.ಚೈತ್ರಾ ದನಿಯಾಗಿದ್ದಾರೆ. ಮೋಹನ್ ಅವರ ಅವರ ನೃತ್ಯನಿರ್ದೇಶನ ಇರುವ ಐ ವನ್ನಾ ಫಾಲೋ ಯೂ ಎಂಬ ಈ ಹಾಡಿನಲ್ಲಿ ನಾಯಕಿ ಲೇಖಾಚಂದ್ರ, ವಿನೋದ್ ಪ್ರಭಾಕರ್ ಅವರನ್ನು ಒಲೈಸಿಕೊಳ್ಳುವ ಪ್ರಯತ್ನ ಮಾಡುತ್ತಾರೆ.
ಕವಿರಾಜ್ ಬರೆದಿರುವ ಈ ಹಾಡಿಗೆ ಗುರುಕಿರಣ್ ಸಂಗೀತ ಸಂಯೋಜನೆ ಮಾಡಿದ್ದಾರೆ. ವಿಶೇಷವಾಗಿ ಈ ಹಾಡಲ್ಲಿ ಬರುವ ಕೆಲವು ಪದಗಳು ಎರಡೆರಡು ಅರ್ಥ ಕೊಡುವಂತಿವೆ. ಬೀಚ್ನಲ್ಲಿ ಶೂಟ್ ಮಾಡಲಾದ ಈ ಹಾಡಲ್ಲಿ ನಾಯಕಿ ಲೇಖಾಚಂದ್ರ ತುಂಬಾ ಸ್ಟೈಲಿಷ್ ಆಗಿ ಕಾಣಿಸಿಕೊಂಡಿದ್ದಾರೆ, ವಿನೋದ್ ಪ್ರಭಾಕರ್ ಕೂಡ ಕೇವಲ ಹಾವ ಭಾವಗಳಿಂದಲೇ ಅಭಿನಯ ನೀಡಿದ್ದಾರೆ, ನೂತನ್ ಉಮೇಶ್ ಅವರ ನಿರ್ದೇಶನದ ಈ ಚಿತ್ರಕ್ಕೆ ಆಕಾಶ್ ಎಂಟರ್ ಪ್ರೈಸಸ್ ಮೂಲಕ ನಿರ್ಮಾಪಕ ಸೋಮಶೇಖರ್ ಕೊಟಿಗೇನಹಳ್ಳಿ ಅವರು ಬೃಹತ್ ಬಂಡವಾಳ ಹೂಡಿ ಅದ್ದೂರಿಯಾಗಿ ನಿರ್ಮಿಸಿದ್ದಾರೆ, ರೈತರ ಹಿತರಕ್ಷಣೆಗೆ ನಾಯಕ ಹೇಗೆಲ್ಲ ಹೋರಾಟ ನಡೆಸುತ್ತಾನೆ, ಸಮಾಜದ ಕೆಲವೊಂದು ಸಮಸ್ಯೆಗಳ ವಿರುದ್ಧ ಆತ ಯಾವರೀತಿ ಸಮರ ಸಾರುತ್ತಾನೆ ಎನ್ನುವುದೇ ಈ ಚಿತ್ರದ ಕಥಾನಕ.
ಈ ಸಂದರ್ಭದಲ್ಲಿ ಮಾತನಾಡಿದ ವಿನೋದ್ ಪ್ರಭಾಕರ್, ಫೈಟರ್ ಎಂದರೆ ಬರೀ ಹೊಡೆದಾಟದ ಚಿತ್ರವಲ್ಲ, ರೈತರ ಬಗ್ಗೆ ಮಾಡಿದ ಸಿನಿಮಾ, ನಾಯಕ ಹೇಗೆ ರೈತರ ಪರವಾಗಿ ನಿಲ್ಲುತ್ತಾನೆ, ರೈತರ ಸಮಸ್ಯೆಗಳಿಗೆ ಆತ ಹೇಗೆ ಪರಿಹಾರ ಹುಡುಕುತ್ತಾನೆ ಎಂದು ಚಿತ್ರದಲ್ಲಿ ಹೇಳಲಾಗಿದೆ, ಚಿತ್ರದ ಕೊನೆಯ 20 ನಿಮಿಷದಲ್ಲಿ ನಾಯಕ ಯಾವ ಕಾರಣಕ್ಕಾಗಿ ಹೋರಾಡುತ್ತಾನೆ ಎಂಬುದನ್ನು ತೋರಿಸಲಾಗಿದೆ. ನನ್ನ ತಾಯಿ ಗುರುಕಿರಣ್ ಅವರ ದೊಡ್ಡ ಫ್ಯಾನ್, ಅವರ ಪ್ರತಿ ಸಿನಿಮಾದ ಹಾಡನ್ನೂ ಇಷ್ಟಪಟ್ಟಿದ್ದರು. ಗುರುಕಿರಣ್ ಜೊತೆ ಸಿನಿಮಾ ಮಾಡಬೇಕೆನ್ನುವ ತುಂಬಾ ದಿನದ ಕನಸು ಈ ಮೂಲಕ ನನಸಾಗಿದೆ. ಕವಿರಾಜ್ ಒಳ್ಳೇ ಲಿರಿಕ್ ಕೊಟ್ಟಿದ್ದಾರೆ. ನಾಯಕಿ ಲೇಖಾಚಂದ್ರ ಕೂಡ ತುಂಬಾ ಜೋಯಲ್ ಆಗಿ ಕಾಣಿಸಿಕೊಂಡಿದ್ದಾರೆ, ನಾನು ಖಂಡಿತ ದುರಹಂಕಾರಿ ಅಲ್ಲ. ಒಳ್ಳೆಯ ಸಿನಿಮಾ, ಒಳ್ಳೆಯ ಕಂಟೆಂಟ್ ಸಿನಿಮಾ ಮಾಡುವ ಉದ್ದೇಶವಿದೆ. ನಮ್ಮ ಲಂಕಾಸುರ ಬಿಡುಗಡೆಗೆ ಸಿದ್ದವಿದೆ, ಈ ನಿರ್ಮಾಪಕರು ನಾವು ಮೊದಲು ಬರುತ್ತೇವೆ ಎಂದರು. ಅವರ ಮಾತಿಗೆ ಬೆಲೆಕೊಟ್ಟು, ನಿರ್ಮಾಪಕರಿಗೆ ಅನುಕೂಲವಾಗಲಿ ಎಂದು ನಾವೇ ಸ್ವಲ್ಪ ಮುಂದೆ ಹೋಗಿದ್ದೇವೆ ಎಂದರು,
ನಂತರ ನಿರ್ಮಾಪಕ ಸೋಮಶೇಖರ್ ಕೊಟಿಗೇನಹಳ್ಳಿ ಅವರು ಮಾತನಾಡುತ್ತ ನಾನೂ ಕೂಡ ಒಬ್ಬ ರೈತರ ಮಗ, ಒಂದು ಹಾಡಿನ ಶೂಟಿಂಗ್ಗೆ ಅಷ್ಟು ದೂರ ಹೋಗಬೇಕಾ ಅಂದಿದ್ದೆ, ಆದರೆ ನಂತರ ಹಾಡನ್ನು ನೋಡಿ ತುಂಬಾ ಖುಷಿ ಆಯ್ತು, ಈ ಹಾಡು ಬಿಡುಗಡೆಯ ನಂತರ ಕರ್ನಾಟಕ ಫಾಲೋ ಮಾಡುತ್ತದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು. ನಿರ್ದೇಶಕ ನೂತನ್ ಉಮೇಶ್ ಮಾತನಾಡಿ ಸುಂದರವಾದ ಹಾಡನ್ನು ಗುರುಕಿರಣ್ ಮಾಡಿದ್ದಾರೆ, ಎರಡು ಅರ್ಥ ಬರುವ ಪದಗಳನ್ನು ಮುಂದಿಟ್ಟುಕೊಂಡು ಈ ಹಾಡನ್ನು ರಚಿಸಲಾಗಿದೆ ಎಂದರು. ನಾಯಕಿ ಲೇಖಾಚಂದ್ರ ಮಾತನಾಡಿ ನಾನು ಚಿತ್ರ ಕಲಾವಿದೆ. ನಾಯಕನನ್ನು ಫಾಲೋ ಮಾಡುವ ಹುಡುಗಿ, ಹಾಡು ಚೆನ್ನಾಗಿದೆ ಎಂದರು.
ಸಂಗೀತ ನಿರ್ದೇಶಕ ಗುರುಕಿರಣ್ ಮಾತನಾಡುತ್ತ ಸಾಂಗ್, ರೀರೆಕಾರ್ಡಿಂಗ್ ತುಂಬಾ ಚೆನ್ನಾಗಿ ಬಂದಿದೆ, ಸಿನಿಮಾ ನೋಡಿದಾಗ ನೀವೇ ಹೇಳುತ್ತೀರಿ, ಹಾಡುಗಳು ಟ್ರೆಂಡಿಂಗ್ ಆಗುತ್ತವೆ ಎಂದು ಹೇಳಿದರು, ಗಾಯಕಿ ಚೈತ್ರಾ ಮಾತನಾಡಿ, ಈ ಹಾಡಿನಿಂದ ಮತ್ತೆ ಗಾಯನ ಶುರು ಮಾಡ್ತಿದ್ದೇನೆ ಎಂದರು. ಗುಣರಂಜನ್ ಶೆಟ್ಟಿ ಸೇರಿದಂತೆ ಮತ್ತಿತರು ಶುಭ ಹಾರೈಸಿದರು. ಬೆಂಗಳೂರು, ಚಿತ್ರದುರ್ಗ ಹಾಗೂ ಪಾಂಡಿಚೇರಿ ಅಲ್ಲದೆ ಉತ್ತರ ಕರ್ನಾಟಕದ ಸುತ್ತಮುತ್ತ ಈ ಚಿತ್ರಕ್ಕೆ ೬೫ ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ನಾಯಕನ ತಾಯಿಯಾಗಿ ಹಿರಿಯ ನಟಿ ನಿರೋಷಾ ಅವರು ಅಭಿನಯಿಸಿದ್ದಾರೆ. ಕ್ಯಾಮರಾಮ್ಯಾನ್ ಆಗಿ ಶೇಖರ್ಚಂದ್ರು ಕಾರ್ಯ ನಿರ್ವಹಿಸಿದ್ದಾರೆ. ಉಳಿದಂತೆ ಶರತ್ ಲೋಹಿತಾಶ್ವ, ಗಿರಿಜಾ ಲೋಕೇಶ್, ಜಹಾಂಗೀರ್, ಚಲುವರಾಜ್ ಹಾಗೂ ಕುರಿಪ್ರತಾಪ್ ಸೇರಿ ಪ್ರಮುಖ ಕಲಾವಿದರು ನಟಿಸಿದ್ದಾರೆ.